Indic Today ಕಥಾಮಾಲಿಕೆ: ಶ್ರೀಕೃಷ್ಣ-ಸತ್ಯಭಾಮೆಯರು ನರಕಾಸುರನನ್ನು ವಧಿಸಿದ ಕಥೆ

S

Shivakumar GV

Guest
[ಕೆಲವೇ ತಿಂಗಳುಗಳ ಹಿಂದೆ ನಾವು ದೀಪಾವಳಿಯನ್ನು ಆಚರಿಸಿದೆವಲ್ಲವೇ? ಚತುರ್ದಶಿಯಂದು ನಾವು ಆಚರಿಸುವುದು ನರಕಚತುರ್ದಶಿ. ಇಲ್ಲಿ ನರಕ ಎನ್ನುವುದು ನರಕಾಸುರನ ಬಗ್ಗೆ. ಅವನ ಹೆಸರಾದರೂ ದೀಪಾವಳಿಗೆ ಹೇಗೆ ಬಂತು – ತಿಳಿದಿರಬೇಕಲ್ಲವೇ? ಮುಂದಿನ ದೀಪಾವಳಿಗೆ ಮುಂಚಿತವಾಗಿ ಈ ಕಥೆಯನ್ನು ಓದಿಕೊಳ್ಳಿ. ಆಡುಮಾತಿನ ಧಾಟಿಯಲ್ಲಿರುವ ಈ ಕಥೆಯನ್ನು ನಿಮ್ಮ ಮಕ್ಕಳಿಗೆ ದೀಪಾವಳಿಯಂದು ಹೇಳಿ]

ಸಾವಿರಾರು ವರ್ಷಗಳ ಹಿಂದೆ ಕೃತಯುಗದಲ್ಲಿ ಹಿರಣ್ಯಾಕ್ಷ ಅನ್ನುವ ರಾಕ್ಷಸನಿದ್ದ. ಅವನು ಇಡೀ ಭೂಮಿಯನ್ನು ಸಮುದ್ರದ ನೀರಿನಲ್ಲಿ ಮುಳುಗಿಸಿಬಿಟ್ಟ. ಆಗ ಮಹಾವಿಷ್ಣು ವರಾಹಾವತಾರವನ್ನು ತಾಳಿ ಹಿರಣ್ಯಾಕ್ಷನನ್ನು ನೀರಿನಲ್ಲೇ ದ್ವಂದ್ವಯುದ್ಧ – ಅಂದರೆ ಒಂದು ತರಹದ ಕುಸ್ತಿಯನ್ನು ಮಾಡಿ – ಕೊಂದು ಭೂದೇವಿಯನ್ನು ಸಂರಕ್ಷಿಸಿದ, ಮತ್ತು ಭೂದೇವಿಗೆ ತನ್ನ ಹಳೆಯ ಸ್ಥಾನ ಸಿಗೋ ಹಾಗೆ ಮಾಡಿದ. ಮಹಾವಿಷ್ಣುವಿನ ಮೂರನೇಯ ಮುಖ್ಯ ಅವತಾರವಾದ ವರಾಹನಿಗೆ ಎಷ್ಟು ಶಕ್ತಿಯಿತ್ತು ಅಂದರೆ ಹಿರಣ್ಯಾಕ್ಷನನ್ನು ಹೂವೆತ್ತಿದ ಹಾಗೆ ಹಗುರವಾಗಿ, ಸುಲಭವಾಗಿ ಕೊಂದುಬಿಟ್ಟನಂತೆ. ಆದರೆ ಅದೆಲ್ಲೋ ಒಂದು ಕಡೆ ಒಂದು ಹನಿ ಬೆವರು ವರಾಹನ ಮೈಯಿಂದ ಕೆಳಗೆ ಬಿದ್ದೇ ಬಿಟ್ಟಿತಂತೆ. ವರಾಹ ಅವತಾರ ಪುರುಷ ಅಂದ ಮೇಲೆ ಕೇಳಬೇಕೆ. ಆ ಬೆವರಿನಿಂದ ಒಬ್ಬ ಶಕ್ತಿವಂತನಾದ ಯುವಕ ಹುಟ್ಟಿಬಿಟ್ಟಿನಂತೆ. ಅವನ ಹೆಸರೇ ನರಕ. ತಂದೆ ವರಾಹ, ತಾಯಿ ಭೂದೇವಿ.

ಭೂದೇವಿಗೆ ತನ್ನ ಮಗ ನರಕನ ಮೇಲೆ ಮಹಾಪ್ರೀತಿ. ತನ್ನ ಮಗ ಸದಾ ಜಯಶಾಲಿಯಾಗಿರಬೇಕು, ಯಾರೂ ಅವನನ್ನು ಸೋಲಿಸಬಾರದು ಎಂದು ವರ ಬೇಡಿದಳಂತೆ. ವರಾಹ ತನ್ನ ಒಂದು ದಂತವನ್ನು ಕೊಟ್ಟು ‘ನೋಡು ಮಗನೆ, ಇದು ತುಂಬಾ ಶಕ್ತಿಶಾಲಿಯಾದ ಆಯುಧ, ಇದನ್ನ ನೀನು ನಿನಗೆ ಅಪಾಯವಾದಾಗ ಅಥವಾ ಧರ್ಮವನ್ನು ಉಳಿಸೋದಕ್ಕೆ ಮಾತ್ರ ಬಳಸಬೇಕು. ಅಮಾಯಕರ ಮೇಲೆ ಮತ್ತು ವಿನಾ ಕಾರಣ ಬಳಸಬಾರದು’ ಎಂದು ಕಟ್ಟಪ್ಪಣೆ ಮಾಡಿದನಂತೆ. ಭೂದೇವಿಗೆ ತನ್ನ ಮಗ ಮೂರು ಲೋಕಗಳಲ್ಲಿ ಮಹಾ ಶಕ್ತಿವಂತ ಅಂತ ಸಂತೋಷ. ಆದರೆ ವರಾಹ ಮಾತ್ರ ‘ನೋಡೋಣ ಅವನು ಒಳ್ಳೇದಕ್ಕಾಗಿ ಶಕ್ತಿ ಬಳಸುತ್ತಾನೋ ಅಥವಾ ಸ್ವಾರ್ಥಕ್ಕೋಸ್ಕರ ಬಳಸುತ್ತಾನೋ’ ಎಂದು ಹೇಳಿ ಮಾಯವಾದನು.

ಮೊದಮೊದಲು ಸರಿಯಾಗಿದ್ದ ನರಕ ನಂತರ ಬಾಣಾಸುರ ಅನ್ನುವ ರಾಕ್ಷಸನ ಜೊತೆ ಸೇರಿ ತಾನೂ ರಾಕ್ಷಸನಾದ. ತಪಸ್ಸು ಮಾಡಿ ಬ್ರಹ್ಮನನ್ನು ಒಲಿಸಿಕೊಂಡು ‘ನನ್ನ ತಾಯಿಯಿಂದ ಮಾತ್ರ ನನಗೆ ಸಾವು’ ಎನ್ನುವ ವರ ಪಡೆದ. ವಿಪರೀತ ಬಲಶಾಲಿಯಾದ ಆದರೆ ಮಹಾ ಅಧರ್ಮಿಯಾದ. ಪ್ರಾಗ್ಜ್ಯೋತಿಷಪುರ – ಅಂದರೆ ಇವತ್ತಿನ ಗುವಹಾಟಿಯಲ್ಲಿ ತನ್ನ ರಾಜ್ಯ ಸ್ಥಾಪಿಸಿಕೊಂಡಿದ್ದ. ಒಳ್ಳೆಯವರಿಗೆ ತೊಂದರೆ ಕೊಟ್ಟು, ಕೆಟ್ಟ ರಾಕ್ಷಸರ ರಾಜ್ಯ ಬೆಳೆಸಿದ. ಹದಿನಾರು ಸಾವಿರ ಸ್ತ್ರೀಯರನ್ನ ತನ್ನ ಅರಮನೆಯಲ್ಲಿ ಬಂದಿಸಿಟ್ಟಿದ್ದ. ಸ್ವರ್ಗಕ್ಕೆ ಹೋಗಿ ಇಂದ್ರನನ್ನೇ ಸೋಲಿಸಿ ಎಲ್ಲಾ ದೇವತೆಗಳನ್ನು ತನ್ನ ಕೈವಶ ಮಾಡಿಕೊಂಡಿದ್ದ. ದೇವತೆಗಳೆಲ್ಲ ವಿಷ್ಣುವಿನ ಹತ್ತಿರ ಹೋಗಿ ನರಕನಿಂದ ನಮ್ಮನ್ನು ರಕ್ಶಿಸು ಎಂದು ಕೇಳಿಕೊಂಡರು. ಅವರೆಲ್ಲರ ಕಷ್ಟವನ್ನ ಶಾಂತನಾಗಿ ಆಲಿಸಿದ ವಿಷ್ಣು ‘ಶ್ರೀಕೃಷ್ಣಾವತಾರಕ್ಕಾಗಿ ನೀವು ಕಾಯಬೇಕು’ ಅಂತ ಸಮಾಧಾನ ಮಾಡಿ ಕಳಿಸಿದ.

ಕೃತಯುಗವಾದ ನಂತರ ತ್ರೇತಾ ಯುಗ ಬಂದಿತು. ಅದಾದ ಮೇಲೆ ದ್ವಾಪರಯುಗ ಬಂತು. ದ್ವಾಪರದಲ್ಲಿ ಮಹಾವಿಷ್ಣು ಶ್ರೀಕೃಷ್ಣನ ರೂಪದಲ್ಲಿ ಅವತಾರ ಎತ್ತಿ ಭೂಮಿಗೆ ಬಂದ. ಮಹಾ ಅಧರ್ಮಿ, ಕ್ರೂರಿಯಾದ ಕಂಸ ಮುಂತಾದ ಅನೇಕ ರಾಕ್ಷಸರನ್ನ ಕೊಂದ. ಆದರೆ ನರಕ ಮಾತ್ರ ಇನ್ನೂ ಬಲಶಾಲಿಯಾಗೇ ಇದ್ದ. ಇಂದ್ರನ ತಾಯಿ ಅದಿತೀದೇವಿಯ ಕಿವಿಯೋಲೆಯನ್ನ ಕಿತ್ತು ತಂದಿದ್ದ. ಈ ಸಮಯದಲ್ಲಿ ಇಂದ್ರ ಶ್ರೀಕೃಷ್ಣನ ಸಹಾಯ ಬೇಡಿದ. “ನೋಡು ಶ್ರೀಕೃಷ್ಣ, ನನ್ನ ತಾಯಿಯ ಕಿವಿಯೋಲೆನೇ ಕಿತ್ತುಕೊಂಡಿದ್ದಾನೆ, ದಯವಿಟ್ಟು ಅವನ ಅಹಂಕಾರದ ಹುಟ್ಟಡಗಿಸು” ಅಂತ. ಕೃಷ್ಣನ ಹೆಂಡತಿ ಸತ್ಯಭಾಮೆಗೆ ಇದನ್ನ ಕೇಳಿ ಮಹಾದುಃಖವಾಯಿತು. ಪ್ರಪಂಚಕ್ಕೇ ತಾಯಿಯಾದ ಅದಿತೀದೇವಿಗೆ ಈ ರೀತಿ ಅವಮಾನ ಮಾಡಿದ ನರಕಾಸುರನನ್ನ ಸುಮ್ಮನೆ ಬಿಡಬಾರದು ಅಂತ ಶ್ರಿಕೃಷ್ಣನಿಗೆ ವಿಶೇಷವಾಗಿ ಕೇಳಿಕೊಂಡಳು.

ಸತ್ಯಭಾಮೆಗೆ ಶ್ರೀಕೃಷ್ಣ ಎಂದೂ ನಿರಾಸೆ ಮಾಡಿರಲಿಲ್ಲ. ಅಲ್ಲದೇ ನರಕಾಸುರ ಮಹಾಪಾಪಿ. ಒಂದು ಅವಕಾಶಕ್ಕಾಗಿ ಕೃಷ್ಣ ಕಾಯುತ್ತಿದ್ದ, ಅಷ್ಟೆ. ‘ಸರಿ’ ಎಂದು ತಕ್ಷಣವೇ ಮಹಾಗರುಡ ಪಕ್ಷಿಯನ್ನ ಮನದಲ್ಲಿ ನೆನೆದ. ವಿಷ್ಣುವಿನ ವಾಹನವಾದ ಗರುಡ ವಿಷ್ಣುವಿನ ಅವತಾರಿಯಾದ ಶ್ರೀಕೃಷ್ಣ ಕರೆದ ತಕ್ಷಣ ಬಂದ. ಕೃಷ್ಣ ತನ್ನ ಆಯುಧವಾದ ಸುದರ್ಶನ ಚಕ್ರ ಮತ್ತು ಇನ್ನಿತರ ಆಯುಧಗಳನ್ನು ತೆಗೆದುಕೊಂಡು ಗರುಡಪಕ್ಷಿಯನ್ನೇರಿ ಕೂತ. ಸತ್ಯಭಾಮೆ ‘ನಾನೂ ಬರುತ್ತೇನೆ’ ಎಂದು ಹಠ ಹಿಡಿದಳು. ಸರಿ ಎಂದು ಶ್ರೀಕೃಷ್ಣ ಸತ್ಯಭಾಮಾಸಮೇತನಾಗಿ ಪ್ರಾಗ್ಜ್ಯೋತಿಷಪುರಕ್ಕೆ ಹೊರಟೇಬಿಟ್ಟ.

ನರಕಾಸುರ ಕ್ರೂರಿಯಷ್ಟೇ ಅಲ್ಲ ಮಹಾಬುದ್ಧಿವಂತ. ತನ್ನ ನಗರಕ್ಕೆ ನಾಲ್ಕು ರೀತಿಯ ರಕ್ಷಣೆಗಳನ್ನು ನಿರ್ಮಿಸಿಕೊಂಡಿದ್ದ. ಮೊದಲನೇಯ ರಕ್ಷಣೆ ಬಂಡೆಗಳಿಂದ ಕೂಡಿದ ಪರ್ವತಗಳದ್ದು. ಅದನ್ನು ಗರುಡ ತನ್ನ ಕೊಕ್ಕಿನಿಂದ ಜೋರಾಗಿ ಕುಕ್ಕಿ ಪುಡಿಪುಡಿ ಮಾಡಿದ. ಎರಡನೇಯದಾಗಿ ಬೆಂಕಿಯಿಂದ ಮಾಡಿದ ಉಂಗುರದ ರೀತಿಯ ಒಂದು ಸುತ್ತುಬೇಲಿಯನ್ನು ದಾಟಬೇಕಾಗಿತ್ತು. ಅದನ್ನು ಕೂಡ ಶ್ರೀಕೃಷ್ಣ ವರುಣಾಸ್ತ್ರದಿಂದ ನೀರು ಚಿಮ್ಮಿಸಿ ಆರಿಸಿ ಪ್ರಾಗ್ಜ್ಯೋತಿಷಪುರದ ಹೆಬ್ಬಾಗಿಲ ಹತ್ತಿರ ಬಂದೇಬಿಟ್ಟ. ತನ್ನ ಶಂಖ ಪಾಂಚಜನ್ಯವನ್ನ ಒಮ್ಮೆ ಜೋರಾಗಿ ಊದಿದ. ಆ ಹೆಬ್ಬಾಗಿಲನ್ನು ‘ಮುರ’ ಎನ್ನುವ – ನರಕಾಸುರನಿಗೆ ಅತ್ಯಂತ ಪ್ರಿಯನಾದ ರಾಕ್ಷಸ – ಕಾಯುತ್ತಿದ್ದ. ಪರ್ವತಗಳನ್ನು ಮತ್ತು ಬೆಂಕಿಯ ಬೇಲಿಗಳನ್ನೆಲ್ಲ ದಾಟಿ ಇಲ್ಲಿಯವರೆಗೆ ಯಾರು ಕೂಡಾ ಬರಲು ಸಾಧ್ಯವಿಲ್ಲ ಎಂದುಕೊಂಡು ನೀರಿನಾಳದಲ್ಲಿ ವಿಹರಿಸುತ್ತಿದ್ದ ಮುರ. ಬಂಡೆಗಳು ಚೂರಾಗಿದ್ದು, ನೀರಿನ ಜೋರು ಶಬ್ದ ಮತ್ತು ಕೃಷ್ಣನ ಶಂಖನಾದದಿಂದ ಮುರನಿಗೆ ಗಾಬರಿಯಾಗಿ ಹೊರಬಂದ. ಅವರಿಬ್ಬರ ಮಧ್ಯೆ ಮಹಾಯುದ್ಧವಾಯಿತು. ಆದರೆ ಕಡೆಗೆ ಶ್ರೀಕೃಷ್ಣನಿಗೆ ಜಯವಾಗಿ ಮುರ ಸಾವನ್ನಪ್ಪಿದ. ಮುರನಂತಹ ಬಲಶಾಲಿಯಾದ ಕ್ರೂರ ರಾಕ್ಷಸನನ್ನು ಕೊಂದ ಕಾರಣ ಶ್ರೀಕೃಷ್ಣನಿಗೆ ಮುರಾರಿ ಎನ್ನುವ ಹೆಸರು ಬಂತು.

ಕಟ್ಟ ಕಡೆಯದಾಗಿ ನರಕಾಸುರನ ಹನ್ನೊಂದು ಅಕ್ಷೌಹಿಣಿ ಸೇನೆ ಶ್ರೀಕೃಷ್ಣನಿಗೆ ಎದುರಾಯಿತು. ಆದರೆ ಅದು ಕೃಷ್ಣನಿಗೆ ಲೆಕ್ಕವೇ ಇಲ್ಲವಾಯಿತು. ಸುಲಭವಾಗಿ ಇಡಿಯ ಸೈನ್ಯವೇ ನಾಶವಾಯಿತು. ಕಡೆಗೆ ವಿಧಿಯಿಲ್ಲದೇ ನರಕಾಸುರನೇ ಬರಬೇಕಾಯಿತು. ಅವರಿಬ್ಬರ ಮಧ್ಯೆ ಅನೇಕ ದಿನಗಳ ಕಾಲ ದೀರ್ಘವಾದ ಯುದ್ದವಾಯಿತು. ನರಕಾಸುರನ ಎಲ್ಲ ಅಸ್ತ್ರಗಳನ್ನೂ ಶ್ರೀಕೃಷ್ಣ ಸೋಲಿಸಿಬಿಟ್ಟ. ಕಡೆಗೆ ನರಕನ ಬಳಿ ವರಾಹ ಕೊಟ್ಟಿದ್ದ ದಂತದಿಂದ ಮಾಡಿದ ತ್ರಿಶೂಲದಂತಹ ಒಂದು ಆಯುಧ ಮಾತ್ರ ಉಳಿದಿತ್ತು. ಇಂತಹ ಸಂಕಷ್ಟದ ಕಾಲಕ್ಕೇ ಅದನ್ನ ಇಟ್ಟುಕೊಂಡಿದ್ದ, ಆದರೆ ಈಗ ಅದನ್ನ ಅಧರ್ಮದ ಕಾರಣಕ್ಕೆ ಬಳಸುವವನಿದ್ದ. ಆದ್ದರಿಂದ ಶ್ರೀಕೃಷ್ಣ ಮತ್ತು ಸತ್ಯಭಾಮೆಯರ ಮುಂದೆ ಈ ತ್ರಿಶೂಲವೂ ನಡೆಯಲಿಲ್ಲ. ನರಕಾಸುರನಿಗೆ ಗಾಬರಿಯಾಯಿತು. ವರಾಹದ ದಂತವೇ ಸೋತಿದೆ ಎಂದರೆ ನನ್ನ ಅಂತ್ಯ ಕಾಲ ಬಂದಿರಬೇಕು ಅನ್ನಿಸಿತು. ಅದೇ ಸಮಯಕ್ಕೆ ನರಕಾಸುರನಿಗೆ ತನಗಿರುವ ವರದ ಜ್ಞಾಪಕ ಬಂತು. ತನ್ನ ತಾಯಿಯಿಂದ ಮಾತ್ರ ತನಗೆ ಸಾವು ಅಂದ ಮೇಲೆ ಸತ್ಯಭಾಮೆಯೇ ತನ್ನ ಹಿಂದಿನ ಜನ್ಮದಲ್ಲಿ ತಾಯಿ ಮತ್ತ್ರು ಶ್ರೀಕೃಷ್ಣನು ವರಾಹನಲ್ಲದೇ ಬೇರೆ ಯಾರೂ ಅಲ್ಲ ಎಂದು ಅವನಿಗೆ ಅರಿವಾಯಿತು. ಕೃಷ್ಣ ಮತ್ತು ಸತ್ಯಭಾಮೆಯರ ಬಾಣದಿಂದ ನರಕಾಸುರ ನೆಲಕ್ಕುರುಳಿದ.

ನರಕಾಸುರ ತನ್ನ ಕೆಟ್ಟಕಾರ್ಯಗಳಿಗೆ ತುಂಬಾ ಪಶ್ಚಾತ್ತಾಪ ಪಟ್ಟ. ಸಾಯುವ ಮುನ್ನ ಅವನು ಸತ್ಯಭಾಮೆ, ಕೃಷ್ಣರನ್ನ ಒಂದು ವರ ಕೇಳಿದ. “ನಾನು ಸತ್ತ ಈ ದಿನ ನರಕಚತುರ್ದಶಿಯೆಂದು ಪ್ರಸಿದ್ದಿಯಾಗಲಿ ಮತ್ತು ಜಗತ್ತು ದೀಪಗಳಿಂದ ನರಕನ ವಧೆಯನ್ನು ಆಚರಿಸಿಲಿ” ಎಂದು ವರವನ್ನು ಬೇಡಿದ. ಭೂದೇವಿಯಾದ ಸತ್ಯಭಾಮೆಯು ಮನಕರಗಿ ವರವನ್ನು ಕೊಟ್ಟಳು. ನರಕಾಸುರ ಕಡೆಗೆ ಸತ್ತ. ಶ್ರೀಕೃಷ್ಣ ನರಕನು ಬಂಧಿಸಿದ್ದ ಹದಿನಾರು ಸಾವಿರ ಸ್ತ್ರೀಯರನ್ನ ಬಿಡುಗಡೆ ಮಾಡಿದ, ನರಕಾಸುರನ ಮಗ ಭಗದತ್ತನನ್ನ ರಾಜನನ್ನಾಗಿ ಮಾಡಿದ. ತಕ್ಷಣವೇ ಸತ್ಯಭಾಮೆಯ ಸಮೇತ ಗರುಡನ ಮೇಲೇರಿ ಸ್ವರ್ಗದಲ್ಲಿರುವ ಇಂದ್ರನಿಗೆ ಅದಿತಿದೇವಿಯ ಓಲೆಗಳನ್ನು ಗೌರವದಿಂದ ಅರ್ಪಿಸಿ ದ್ವಾರಕೆಗೆ ಹಿಂದಿರುಗಿದ.

Feature Image Credit: youtube.com

The post ಕಥಾಮಾಲಿಕೆ: ಶ್ರೀಕೃಷ್ಣ-ಸತ್ಯಭಾಮೆಯರು ನರಕಾಸುರನನ್ನು ವಧಿಸಿದ ಕಥೆ appeared first on Indic Today.

Continue reading...
 
Top